Wednesday, August 14, 2013

ಓ ನನ್ನ ಭಾರತೀಯ.........

ಭಾರತವೆಂಬ ಪುಣ್ಯಭೂಮಿಯಲಿ
ಜನಿಸಿದ ನಾವೇ ಧನ್ಯರು;
ಜನ್ಮಜನ್ಮಗಳ ಪುಣ್ಯದ ಫಲವಿದು,
ನಾವುಗಳೇ ಭಾಗ್ಯವಂತರು!


ಸುಖದಿಂದಿರುವೆವು ನಾವಿಂದೆಂದರೆ,
ಕಾರಣವಿಹುದು ಅದಕೊಂದು;
ಸುಖದ ಹೇರಿನ ಖುಷಿಯ ಹಿಂದೆ,
ವ್ಯಥೆಯ ಕಥೆಯು ಇಹುದೊಂದು!


ಬಂದರು ಬಿಳಿಯರು ವ್ಯಾಪಾರ ಮಾಡಲು,
ಇಲ್ಲಿನ ಸಿರಿಯನು ಕೊಳ್ಳೆ ಹೊಡೆಯಲು;
ಮೋಸದ ಪರಿವೆಯೇ ಇಲ್ಲದ ಜನರು,
ಬಿಳಿಯರ ಕೈಯ್ಯಲಿ ಗೊಂಬೆಯಾದರು!

ಆಳಿದರವರು ಇನ್ನೂರು ವರ್ಷ!
ಕಿತ್ತುಕೊಂಡರು ಭಾರತೀಯರ ಹರ್ಷ;
ಎಚ್ಚೆತ್ತರಾಗಲೇ ಮಾತೆಯ ಕುವರರು,
ಭಾರತಾಂಬೆಯ ನಲ್ಮೆಯ ಮಣಿಯರು.

ವೀರಯೋಧರು, ದೇಶಭಕ್ತರು,
ದಣಿವನರಿಯದೆ ಹೋರಾಡಿದರು!
‘ರಕ್ತ ತರ್ಪಣ’ದ ಅರ್ಪಣೆ ನೀಡಿ,
ಮಾತೃಭೂಮಿಯನು ಮರಳಿ ಪಡೆದರು!

ಓರ್ವರೀರ್ವರೇ? ನೂರಾರಿಹರು!
ಅವರ ಹೆಸರ ಹೇಳಲು ಸಾಲದು ಸಾಲು;
ಭಾರತ ಮಾತೆಯ ವೀರಪುತ್ರರು,
ದೇಶಕ್ಕಾಗಿ ಮಣ್ಣಲ್ಲೇ ಮಣ್ಣಾದವರು.

ಓ ನನ್ನ ಭಾರತೀಯರೆ!
ಬನ್ನಿರಿ ಸ್ವಾತಂತ್ರ್ಯವ ಸಂಭ್ರಮಿಸೋಣ!
ಭಾರತಮಾತೆಯು ಬಂಧನದಿಂದ
ಮುಕ್ತವಾದ ‘ಆ’ ದಿನವ ನೆನೆಯೋಣ…..

                                                                                             
 -ಪ್ರಣವ